ಮಹಾಲಕ್ಷ್ಮೀ ಮದುವೆಗೆ ಅದ್ದೂರಿ ಸ್ವಾಗತ ಪ್ರೀಮಿಯರ್ ಶೋ ನೋಡಿ ಮೆಚ್ಚಿದ ವೀಕ್ಷಕರು
ಜೂನ್ 1ರಿಂದ ಪ್ರಸಾರವಾಗಲಿದೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಜೆ 6.30ಕ್ಕೆ ಈ ಧಾರಾವಾಹಿ ವೀಕ್ಷಕರ ಮುಂದೆ ಬರಲಿದೆ.
ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ‘ಸನ್ ಉದಯ’ ವಾಹಿನಿಯಲ್ಲಿ ಹೊಸ ಧಾರಾವಾಹಿ ‘ಮಹಾಲಕ್ಷ್ಮೀ ಮದುವೆ’ ಜೂನ್ 1ರಿಂದ ಪ್ರಸಾರವಾಗಲಿದೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಜೆ 6.30ಕ್ಕೆ ಈ ಧಾರಾವಾಹಿ ವೀಕ್ಷಕರ ಮುಂದೆ ಬರಲಿದೆ.
ವಿನೂತನ ಪ್ರಯತ್ನದ ಭಾಗವಾಗಿ, ಧಾರಾವಾಹಿಯ ಪ್ರಸಾರಕ್ಕೂ ಮುನ್ನ ಭಾನುವಾರ ಬೆಂಗಳೂರಿನಡಾ.ರಾಜ್ಕುಮಾರ್ ಒಳಾಂಗಣ ಸ್ಟೇಡಿಯಂನಲ್ಲಿ ಎರಡು ಕಂತುಗಳ ವಿಶೇಷ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಅಭಿಮಾನಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸಭಾಂಗಣ ತುಂಬಿ ತುಳುಕಿತು.
ಪ್ರೀಮಿಯರ್ ವೇಳೆ ಮೊದಲ ಎರಡು ಕಂತುಗಳನ್ನು ವೀಕ್ಷಿಸಿದ ಅಭಿಮಾನಿಗಳು ಧಾರಾವಾಹಿಯ ಕಥೆ, ಪಾತ್ರಗಳು ಹಾಗೂ ಮುಂದಿನ ಬೆಳವಣಿಗೆಗಳ ಕುರಿತು ತಂಡದ ಸದಸ್ಯರಿಗೆ ಪ್ರಶ್ನೆಗಳನ್ನು ಕೇಳಿದರು. ಈ ಸಂದರ್ಭದಲ್ಲಿ ಕಲಾವಿದರು ಮತ್ತು ತಾಂತ್ರಿಕ ತಂಡ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿ, ಧಾರಾವಾಹಿಯ ವಿಶೇಷತೆಗಳನ್ನು ಹಂಚಿಕೊಂಡರು.
ನಾಯಕಿ ಅಮೂಲ್ಯ ಗೌಡ, “ಧಾರಾವಾಹಿಯ ದೃಶ್ಯಗಳನ್ನು ನೋಡಿದಾಗ ಅದು ಪ್ರತಿಯೊಬ್ಬರ ಮನೆಯಲ್ಲೇ ನಡೆಯುತ್ತಿರುವ ಘಟನೆಯಂತೆ ಭಾಸವಾಗುತ್ತದೆ. ಪ್ರತಿಯೊಂದು ಸನ್ನಿವೇಶವೂ ಕುತೂಹಲ ಮೂಡಿಸುವಂತಿದೆ. ನಿರ್ದೇಶಕರು ಎಲ್ಲ ಕಲಾವಿದರಿಂದಲೂ ಅತ್ಯುತ್ತಮವಾಗಿ ಕೆಲಸ ತೆಗೆದುಕೊಂಡಿದ್ದಾರೆ” ಎಂದು ಹೇಳಿದರು.
ನಾಯಕ ಭರತ್ ಶಿವಣ್ಣ ಮಾತನಾಡಿ.. “ಕಿರುಚಿತ್ರಗಳಲ್ಲಿ ನಟಿಸಿರುವ ನನಗೆ ಮೊದಲ ಬಾರಿಗೆ ಸನ್ ಉದಯ ವಾಹಿನಿಯಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ. ಈ ಪಾತ್ರ ನನಗೆ ಸಾಕಷ್ಟು ಸವಾಲಿನದ್ದಾಗಿದ್ದು, ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದೇನೆ” ಎಂದರು.
ಕಾರ್ಯಕ್ರಮದಲ್ಲಿ ಅಮೃತ ರಾಮಮೂರ್ತಿ ಹಾಗೂ ಸೀತಾ ಕೋಟೆ ಕೂಡ ತಮ್ಮ ಪಾತ್ರಗಳ ಕುರಿತು ಅಭಿಪ್ರಾಯ ಹಂಚಿಕೊಂಡರು. ಧಾರಾವಾಹಿಯ ತಾರಾಗಣದಲ್ಲಿ ಶಿವಾಜಿರಾವ್ ಜಾಧವ್, ಮೂಗು ಸುರೇಶ್, ಪದ್ಮಿನಿ, ಮಂಜು ಪಾವಗಡ, ಮಾನಸ, ಮೇಘಶ್ರೀ, ಸ್ನೇಹಾ ಭಟ್, ಪ್ರತೀಕ್ಷಾ, ಧನುಷ್ ಗೌಡ ಹಾಗೂ ಹರಿಪ್ರಿಯಾ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ಲೈಮ್ಲೈಟ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಶಿವಧ್ವಜ್ ಶೆಟ್ಟಿ ಮತ್ತು ಪ್ರಶಾಂತ್ ರೈ ಜಂಟಿಯಾಗಿ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ನಿರ್ದೇಶನದ ಹೊಣೆಯನ್ನು ಶಿವ ಪೂಜೇನ ಅಗ್ರಹಾರ ವಹಿಸಿಕೊಂಡಿದ್ದಾರೆ.

ಕಥೆಯ ಕೇಂದ್ರಬಿಂದು ಮಹಾಲಕ್ಷ್ಮಿ ಮತ್ತು ಶ್ರೀಹರಿ. ಮದುವೆಯಾದ ನಂತರವೂ ತವರು ಮನೆಯ ಜವಾಬ್ದಾರಿಯನ್ನು ಹೊರುವ ದೃಢ ನಿಲುವಿನ ಯುವತಿ ಮಹಾಲಕ್ಷ್ಮಿ. ಮತ್ತೊಂದೆಡೆ ಮಧ್ಯಮ ವರ್ಗದ, ಮೃದು ಸ್ವಭಾವದ ಯುವಕ ಶ್ರೀಹರಿ. ಸಾವಿರ ಸುಳ್ಳುಗಳಲ್ಲ, ಒಂದೇ ಒಂದು ಸುಳ್ಳಿನ ಆಧಾರದ ಮೇಲೆ ನಡೆಯುವ ಇವರ ಮದುವೆ ಮುಂದೇನು ತಿರುವು ಪಡೆಯುತ್ತದೆ..? ಜೀವನದ ಸವಾಲುಗಳನ್ನು ಮಹಾಲಕ್ಷ್ಮಿ ಹೇಗೆ ಎದುರಿಸುತ್ತಾಳೆ..? ಎಂಬುದು ಧಾರಾವಾಹಿಯ ಕಥಾಸಾರ.
ಕುಟುಂಬದ ಭಾವನೆಗಳು, ಸಂಬಂಧಗಳ ಮೌಲ್ಯ ಮತ್ತು ಜೀವನದ ಅನಿರೀಕ್ಷಿತ ತಿರುವುಗಳನ್ನು ಒಳಗೊಂಡಿರುವ ‘ಮಹಾಲಕ್ಷ್ಮೀ ಮದುವೆ’ ಧಾರಾವಾಹಿ ಇಂದಿನಿಂದ ಸೋಮವಾರದಿಂದ ಶನಿವಾರದವರೆಗೆ ಸಂಜೆ 6.30ಕ್ಕೆ ‘ಸನ್ ಉದಯ’ ವಾಹಿನಿಯಲ್ಲಿ ಪ್ರಸಾರವಾಗಲಿದೆ.