ಪ್ರೇಮಿಗಳ ಗಮನಕ್ಕೆ ಚಿತ್ರದ ಟ್ರೇಲರ್ ರಿಲೀಸ್
ಸಿಟಾಡಿಲ್ ಫಿಲಂಸ್ ಹಾಗೂ ಜೊಯಿಟಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಲ್ಲಿ ಸುಬ್ಬು ಹಾಗೂ ಯಕ್ಕಂಟಿ ರಾಜಶೇಖರ ರೆಡ್ಡಿ ಜಂಟಿಯಾಗಿ ನಿರ್ಮಾಣ ಮಾಡಿರುವ “ಪ್ರೇಮಿಗಳ ಗಮನಕ್ಕೆ” ಚಿತ್ರದ ಟ್ರೇಲರರ್ ಬಿಡುಗಡೆ ಆಗಿದೆ. ವಿನ್ಸೆಂಟ್ ಇನ್ಬರಾಜ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ನಾಯಕನಾಗಿ ಬಿಗ್ ಬಾಸ್ ಖ್ಯಾತಿಯ ಶಶಿ, ನಾಯಕಿಯಾಗಿ ಕನ್ನಡ, ತುಳು ಸಿನಿಮಾಗಳಲ್ಲಿ ನಟಿಸಿರುವ ಚಿರಶ್ರೀ ಅಂಚನ್ ನಟಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಂಥ ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಐಟಿ, ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಲ್ಲಿ ಲಿವಿಂಗ್ ರಿಲೇಶನ್ಶಿಪ್ ಹೆಚ್ಚಾಗುತ್ತಿದೆ.
ಕೊರೋನಾ ಸಮಯದಲ್ಲಿ ಇಡೀ ದೇಶವೇ ಲಾಕ್ಡೌನ್ ಅದ ಸಮಯದಲ್ಲಿ ಐಟಿ, ಬಿಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿಕೊಟ್ಟವು. ಅದರಂತೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚಿತ್ರದ ನಾಯಕ, ನಾಯಕಿ ಇಬ್ಬರೂ ಒಂದೇ ಮನೆಯಲ್ಲಿ ವಾಸಿಸತೊಡಗುತ್ತಾರೆ. ಆಗ ಆ ಮನೆಯಲ್ಲಿ ಏನೇನು ನಡೆಯುತ್ತದೆ ? ಆಗಂತುಕನೊಬ್ಬ ಆ ಮನೆಗೆ ಹೇಗೆ ಎಂಟ್ರಿ ಕೊಡುತ್ತಾನೆ ? ಅವರಿಗೆ ಯಾವರೀತಿ ತೊಂದರೆ ಕೊಡುತ್ತಾನೆ? ಆ ಸಂದರ್ಭವನ್ನು ಅವರು ಹೇಗೆ ಫೇಸ್ ಮಾಡಿದರು? ಎನ್ನುವುದೇ ಚಿತ್ರದ ಸಾರಂಶ.
“ಐದು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ನಡೆದ ಒಂದು ನೈಜಘಟನೆ ಈ ಚಿತ್ರಕ್ಕೆ ಪ್ರೇರಣೆ. ಇಡೀ ಚಿತ್ರದ ಕಥೆ ನಡೆಯೋದು ಒಂದೇ ಮನೆಯಲ್ಲಿ, 2 ಪಾತ್ರಗಳ ಸುತ್ತ, ಮತ್ತೊಂದು ಪಾತ್ರ ಕೆಲ ದೃಶ್ಯಗಳಲ್ಲಿ ಮಾತ್ರ ಬಂದುಹೋಗುತ್ತೆ, ಅವೇರ್ನೆಸ್ ಜತೆಗೆ ಮನರಂಜನೆಯ ಅಂಶವನ್ನಿಟ್ಟುಕೊಂಡು ಮಾಡಿರೋ ಚಿತ್ರವಿದು. ಬೆಂಗಳೂರಿನ ಉತ್ತರಹಳ್ಳಿಯ ಮನೆಯೊಂದರಲ್ಲಿ ಬಹುತೇಕ ಚಿತ್ರೀಕರಣ ನಡೆಸಲಾಗಿದೆ“ ಎಂದು ನಿರ್ದೇಶಕ ವಿನ್ಸೆಂಟ್ ಇನ್ಬರಾಜ್ ಹೇಳಿದರು.
ನಾಯಕ ಶಶಿ ಮಾತಾಡಿ ಇದು ನನ್ನ ಮೂರನೇ ಚಿತ್ರ. ಈಗಿನ ಕಾಲದ ಯೂಥ್ಗೆ ಈ ಕಥೆ ಕನೆಕ್ಟ್ ಆಗುತ್ತೆ ಹಾಗೂ ನಾಯಕಿ ಚಿರಶ್ರೀ ಮಾತನಾಡಿ ಚಿತ್ರದಲ್ಲಿ ನನ್ನದು ಐಟಿ ಕಂಪನಿಯಲ್ಲಿ ಕೆಲಸಮಾಡೋ ದರ್ಶಿನಿ ಎಂಬ ಪಾತ್ರ. ಕನ್ನಡ, ತುಳು ಸೇರಿ ಇದು ನನ್ನ ಹತ್ತನೇ ಚಿತ್ರ ಎಂದು ಹೇಳಿದರು.
ನಿರ್ಮಾಪಕ ಸುಬ್ಬು ಮಾತನಾಡುತ್ತ ನಾನು ಮೂಲತ: ಬಿಲ್ಡರ್, ನಿರ್ದೇಶಕರು ಈ ಕಥೆ ಹೇಳಿದಾಗ ಕಾನ್ಸೆಪ್ಟ್ ತುಂಬಾ ಇಷ್ಟವಾಗಿ ನಿರ್ಮಿಸಲು ಮುಂದಾದೆ. ನಿರ್ಮಾಣದ ಜತೆ ಖಳನಾಯಕನಾಗಿಯೂ ಈ ಚಿತ್ರದಲ್ಲಿ ನಟಿಸಿದ್ದೇನೆ, ಇದೇ ತಿಂಗಳ ಅಂತ್ಯದಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆಯಿದೆ ಎಂದು ಹೇಳಿದರು.
ಮತ್ತೊಬ್ಬ ನಿರ್ಮಾಪಕ ಯಕ್ಕಂಟಿ ರಾಜಶೇಖರ ರೆಡ್ಡಿ ಮಾತನಾಡಿ ಇದೊಂದು ನೈಸ್ ಕಾನ್ಸೆಪ್ಟ್. ಒಂದೊಳ್ಳೇ ಟೀಮ್ವರ್ಕ್ ನಿಂದ ಉತ್ತಮ ಸಿನಿಮಾ ಹೊರಬರುತ್ತೆ ಎಂಬ ನಂಬಿಕೆಯಿದೆ ಎಂದರು.